Monday, September 27, 2010

‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

ಮಹಾಭಾರತ ’ ಮತ್ತು ‘ ರಾಮಾಯಣ ’ ಈ ಎರಡು ಹಿಂದೂ ಧಾರ್ಮಿಕ ಕೃತಿಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ಲೆಕ್ಕವಿಲ್ಲ. ಅದರಲ್ಲೂ ಮಹಾಭಾರತವನ್ನು ಓದುವಾಗ ಪ್ರತಿ ಬಾರಿ ಹೊಸ ಹೊಸ ವಿಚಾರಗಳು ಗೋಚರವಾಗುತ್ತೆ. ಮಹಾಭಾರತದ ಮೂಲ ಕಥೆಗಳು ಹಾಗು ಕೆಲವು ದಿನಪತ್ರಿಕೆ, ಕೆಲವು ಮ್ಯಾಗಜಿನ್ ಗಳಲ್ಲಿ ಮಹಾಭಾರತಕ್ಕೆ ಸಂಬಂದಿಸಿದಂತೆ ಪ್ರಕಟವಾಗೋ ಉಪಕಥೆಗಳು, ಇವೆರಡನ್ನು ತಾಳೆ ಹಾಕಿ ಕಥೆಗಳ ಮಧ್ಯ ಲಿಂಕ್ ಕೊಡೂದು, ಅದರ ಬಗ್ಗೆ ಸ್ನೇಹಿತರು ಹಾಗು ನನ್ನ ಅಣ್ಣ ಶಶಿಯೊಡನೆ ಚರ್ಚೆಯನ್ನು ಆಗಾಗ ಮಾಡುತ್ತಾ ಇರುತ್ತೇನೆ. ನಾವು ನಮ್ಮ ಬಾಲ್ಯದಲ್ಲಿ ನಮ್ಮ ಭಾಷಾ ಪಟ್ಯ ಪುಸ್ತಕಗಳಲ್ಲಿ ಈ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಕೆಲವು ವೀರರ ಹಾಗು ಅವರ ಸಂಕಿಪ್ತ ಜೀವನ ಚರಿತ್ರೆಗಳನ್ನೂ ಓದಿರುತ್ತೇವೆ. ಪ್ರೈಮರಿಯಲ್ಲಿದ್ದಾಗ ಏಕಲವ್ಯನ ಬಗ್ಗೆ ಓದಿ ಇಡಿ ಮಹಾಭಾರತದ ಕಥೆಯಲ್ಲಿ ಅವನೇ ಪರಾಕ್ರಮಿ ಅನ್ನಿಸಿತ್ತು ಹಾಗೆ ಹೈಸ್ಕೊಲ್ ನಲ್ಲಿ ಮಹಾಭಾರತದ ಕಥೆ ಓದು ಹಾಗು ವಿಶ್ಲೇಷಣೆ ನಡುವೆ ನನಗೆ ಕೆಲವೊಮ್ಮೆ ಅರ್ಜುನ ಕೆಲವೊಮ್ಮೆ ಕರ್ಣನು ಪರಾಕ್ರಮಿ ಅನ್ನಿಸುತ್ತಿದ್ದರು. ನಮ್ಮ ಊರು ಕಾಡುಕೊತ್ತನ ಹಳ್ಳಿಯಲ್ಲಿ ನಡೆಯುತ್ತಿದ ‘ ಕುರುಕ್ಷೇತ್ರ - ಧರ್ಮ ರಾಜ್ಯ ಸ್ಥಾಪನೆ ’ ಎಂಬ ಪೌರಾಣಿಕ ನಾಟಕದಲ್ಲಿ ಕುರುರಾಯ ಧುರ್ಯೋಧನನ ಪಾತ್ರಕಿದ್ದ ಬೇಡಿಕೆ ಹಾಗು ಅವನ ಪಾತ್ರದ ಡೈಲಾಗ್ಸ್, ದರ್ಬಾರ್ ಸೀನ್ ಗಳನ್ನು ನೋಡಿ ಧುರ್ಯೋಧನನೇ ಎಲ್ಲಾರಿಗಿಂತ ವೀರನಿರಬೇಕು ಅಂತ ಕೂಡ ಅನ್ನಿಸಿತ್ತು. ನಂತರ ಟಿ.ವಿ.ಯಲ್ಲಿ ಬರುತ್ತಿದ ಮಹಾಭಾರತ ಸೀರಿಯಲ್ ನ ಫುಲ್ ಎಪಿಸೋಡ್ ಅನ್ನು ಪುನ ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ನೋಡಿದಾಗ ಇಡೀ ಮಹಾಭಾರತ ಕಥೆಗೆ ಒಂದು ರೀತಿ ಕೃಷ್ಣನೇ ಮೂಲ ಹಾಗು ಅವನೇ ಎಲ್ಲಾರಿಗಿಂತ ಬುದ್ದಿವಂತ, ಚತುರ, ಬಲಶಾಲಿ ಅನ್ನೋ ನಿರ್ಧಾರ ಮಾಡಿದ್ದೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿ ಓದಿದ ನಂತರ ಅವರ ಕಾದಂಬರಿಗಳ ಫುಲ್ ಸೀರೀಸ್ ಓದಲು ಶುರು ಮಾಡಿದ ಮೇಲೆ ಹಾಗು ನನ್ನ ಅಣ್ಣ ಶಶಿಯ ಸಲಹೆ ಮೇರೆಗೆ ಭೈರಪ್ಪನವರ ಪ್ರಶಸ್ತಿ ಪುರಸ್ಕ್ರತ ಕಾದಂಬರಿಯಾದ ‘ಪರ್ವ’ ವನ್ನು ಓದಿದೆ. ಮಹಾಭಾರತದ ಪಾತ್ರಗಳನ್ನು ಎಲ್ಲರಂತೆ ಅತೀಶಯೂ ಶಕ್ತಿ ಇರೂ ದೇವಮಾನವರಾಗಿ ಚಿತ್ರಿಸದೆ ಅವರನ್ನೆಲ್ಲಾ ಕಲಿಯುಗದಲ್ಲಿ ಇರೋ ಸಾಮಾನ್ಯ ಮನುಷ್ಯರಂತೆ ಭೈರಪ್ಪನವರು ಚಿತ್ರಿಸಿದ್ದಾರೆ. ಆ ಕಾದಂಬರಿಯಲ್ಲಿ ಭೀಮನ ಪಾತ್ರವನ್ನು ಹೆಚ್ಚಾಗಿ ಗಮನದಲ್ಲಿ ಇಟ್ಟುಕೊಂಡು, ಭೀಮನ ಬಗ್ಗೆ ಸ್ವಲ್ಪ ಓತ್ತು ಕೊಟ್ಟು ಬರೆಯಲಾಗಿರುವುದರಿಂದ ಸಹಜವಾಗಿ ‘ ಪರ್ವ ’ ಓದಿದ ಮೇಲೆ ಭೀಮನೇ ಮಹಾಭಾರತ ಕಥೆಯ ನಿಜವಾದ ಪರಾಕ್ರಮಿ ಹಾಗು ಬಲಶಾಲಿ ಎಂದು ಅನ್ನಿಸದೇ ಇರಲಾರದು.
ಸೊ ಹಾಗೆ ಮಹಾಭಾರತದ ಕಥೆ ಪಾತ್ರಗಳು ಅವುಗಳ ವಿಶ್ಲೇಷಣೆಯಲ್ಲಿ ಅವಾಗವಾಗ ಮುಳುಗೂ ನನಗೆ ಮೊನ್ನೆ ಇಂಟರ್ನೆಟ್ನಲ್ಲಿ ಜಾಲಡುತಿದ್ದಾಗ ಮಹಾಭಾರತ ಕಥೆಯ ಅನೇಕ ವೀರರ ಪಟ್ಟಿ ಯಲ್ಲಿ ‘ ಬಾರ್ಬರಿಕ ’ ಅನ್ನೋ ಹೆಸರನ್ನು ಮೊದಲನೆ ಸರಿ ನೋಡಿದೆ. ಅವನ ಕಥೆ ಅನ್ನು ಸಂಪೂರ್ಣವಾಗಿ ಹೆಕ್ಕಿ ತೆಗೆದು ಓದಿದ ಮೇಲೆ ಅನ್ನಿಸಿತು ಈ ಬಾರ್ಬರಿಕನೆ ಇಡಿ ಮಹಾಭಾರತ ಕಥೆಯ ಅಪ್ರತಿಮ ವೀರ ಕ್ಷತ್ರಿಯ ಹಾಗು ಮಹಾ ಪರಾಕ್ರಮಿ ಎಂದು. ಆದರೆ ಅಷ್ಟೆಲ್ಲ ಶಕ್ತಿ, ಚಾಣಾಕ್ಷತನ ಇದ್ದು ಅವನು ಮಹಾಭಾರತ ಕಥೆಯಲ್ಲಿ ಸರಿಯಾಗಿ ಬೆಳಕಿಗೆ ಬರಲು ಆಗಲಿಲ್ಲ , ಬರುವುದಕ್ಕೆ ಶ್ರೀ ಕೃಷ್ಣನು ಬಿಡಲಿಲ್ಲ. ಸರಿಯಾದ ಅವಕಾಶ ಹಾಗು ಫೋರಂ ಸಿಕ್ಕಿದ್ದರೆ ಇವತ್ತು ನಮ್ಮ ಜನ ಅರ್ಜುನ, ಕರ್ಣ, ಧುರ್ಯೋದನ, ಭೀಮ, ಏಕಲವ್ಯ ಮುಂತಾದವರಿಗಿಂತ ಬಾರ್ಬರಿಕನನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಇದ್ದರು ಅನ್ನಿಸುತ್ತೆ.
ಈ ಬಾರ್ಬರಿಕನ್ನು ಬೇರೆ ಯಾರು ಅಲ್ಲ... ಭೀಮನ ಮಗನಾದ ಘಟೂತ್ಕಚನ ಪುತ್ರ. ಅಂದರೆ ಭೀಮ ಹಾಗು ಹಿಡಂಬಿಯ ಮೊಮ್ಮಗ. ಈ ಬಾರ್ಬರಿಕನು ‘ಯಕ್ಷ ’ನ ಅವತಾರ ಎಂದು ಹೇಳಲಾಗುತ್ತೆ. ಇದೆ ಯಕ್ಷ ಪಾಂಡವರು ವನವಾಸದಲ್ಲಿದ್ದಾಗ ಸರೋವರದ ಬಳಿ ತನ್ನ ಪ್ರಶ್ನೆಗೆ ಉತ್ತರಿಸದೆ ನೀರು ಕುಡಿದ ಭೀಮರ್ಜುನಾದಿ ಹಾಗು ನಕುಲ ಸಹದೇವರನ್ನು ಮೂರ್ಚೆಗೊಳಿಸಿದ್ದ. ಬಾರ್ಬರಿಕನು ತನ್ನ ತಾಯೀ ಮುರ್ವಿಯ (ಯಾದವರ ರಾಜ ಮರುವಿನ ಮಗಳು) ಬಳಿ ಯುದ್ದ ಕೌಶಲ್ಯಗಳನ್ನು ಕಲಿತನೆಂದು ಹೇಳಲಾಗುತ್ತೆ. ಬಾರ್ಬರಿಕನು ಬಾಲ್ಯ ಹಾಗು ಯ್ಯೋವನಾಸ್ಥೆಯಲ್ಲಿಯೇ ಅತಿ ಪರಾಕ್ರಮಿಯಾಗಿದ್ದು ಅವನ ಧೀರತನ ಹಾಗು ಪರಾಕ್ರಮ ನೋಡಿ, ಅದನ್ನು ಮೆಚ್ಚಿ ಶಿವನು ಅವನಿಗೆ 3 ಬಾಣಗಳನ್ನು ವರವಾಗಿ ನೀಡಿದ್ದನು. ಹಾಗಾಗಿ ಬಾರ್ಬರಿಕಗೆ ‘ತೀನ್ ಬಾಣ್ ದಾರಿ’ ಎಂಬ ಹೆಸರು ಕೂಡ ಉಂಟು. ಶಿವನಂತೆ ಅಗ್ನಿ ದೇವನೂ ಬಾರ್ಬರಿಕನ ಪರಾಕ್ರಮ ಮೆಚ್ಚಿ ಅವನಿಗೆ ಒಂದು ಬಿಲ್ಲನ್ನು ನೀಡಿದ್ದನು. ಶಿವ ಕೊಟ್ಟ ಬಾಣ ಹಾಗು ಅಗ್ನಿದೇವ ಕೊಟ್ಟ ಬಿಲ್ಲು ಇವೆರಡರಿಂದ ಬಾರ್ಬರಿಕನು ಇಡೀ ಮೂರುಲೋಕದಲ್ಲಿ ಯಾರನ್ನಾದರು ಜಯೀಸಬಹುದಾಗಿತ್ತು.
ಹೀಗೆ ಬಾರ್ಬರಿಕನಿಗೆ ಮಹಾಭಾರತದ ಯುದ್ದವು ಶುರು ಆಗೀರುವ ವಿಚಾರ ತಿಳಿದು ತನ್ನ ತಾಯೀ ಮರುವಿಯ ಬಳಿ ‘ಮಹಾಭಾರತದ ಯುದ್ದನೋಡಲು ತುಂಬಾ ಆಸೆಯಾಗುತಿದೆ, ಯುದ್ದ ಹೇಗೆ ನೆಡೆಯುತ್ತೆ ಅಂತ ನೋಡಿ ಬರುವೆ’ ಅಂತ ಹೇಳಿ, ಅವಳ ಅನುಮತಿ ಪಡೆದು ತನ್ನ 3 ಬಾಣ ಹಾಗು ಬಿಲ್ಲನ್ನು ತೆಗೆದುಕೊಂಡು ತನ್ನ ನೀಲಿ ಕುದುರೆ ಏರಿ ಕುರುಕ್ಷೇತ್ರಕ್ಕೆ ಬಂದನು. ಅಲ್ಲಿ ಕೃಷ್ಣನು ಪಾಂಡವರ ಹಾಗು ಕೌರವನ ಕಡೆಯ ಮುಖ್ಯಸ್ಥರನ್ನು ಕರೆಸಿ ಈ ಕುರುಕ್ಷೇತ್ರ ಯುದ್ದದ ನಿಯಮಗಳು, ರೊಪುರೇಷಗಳನ್ನು ಚರ್ಚಿಸುತಿದ್ದನು. ಹೀಗೆ ಮಾತಿನ ನಡುವೆ ಕೃಷ್ಣನು ‘ಈ ಯುದ್ದ ಎಷ್ಟು ದಿನ ನೆಡೆಯಬಹುದು ?’ ಎಂದು ಎಲ್ಲರಲ್ಲಿ ಕೇಳಲಾಗಿ ಭೀಷ್ಮನು 20 ದಿನ, ದ್ರೋಣ 25 ದಿನ, ಕರ್ಣ 30 ದಿನ, ಅರ್ಜುನ 18 ದಿನ ಎಂದು ಕ್ರಮವಾಗಿ ಹೇಳಿದರು. ಆದರೆ ಬಾರ್ಬರಿಕನು ಮಧ್ಯ ಎದ್ದು ನಿಂತ ಎಲ್ಲರಿಗೂ ತನ್ನ ಪ್ರಣಾಮಗಳನ್ನು ತಿಳಿಸಿ ‘ಈ ಮಹಾಭಾರಥದ ಯುದ್ದವನ್ನು ಮುಗಿಸಲು ತನಗೆ ಕೇವಲ ಒಂದು ಗಂಟೆ ಸಾಕು !’ ಅಂತ ಹೇಳಿದನು. ಕೃಷ್ಣ ಸೇರಿದಂತೆ ಆಸ್ಥಾನದಲ್ಲಿ ನೆರದಿದ್ದ ಎಲ್ಲಾ ಹಿರಿಯರಿಗೂ ಬಾರ್ಬರಿಕನ ಮಾತು ಕೇಳಿ ಅವಕ್ಕಾದರು. ಕೃಷ್ಣ ಎದ್ದು ಬಂದು ಬಾರ್ಬರಿಕನಿಗೆ ತನ್ನ ಮಾತನ್ನು ಈಗಲೇ ನಿರೂಪಿಸಲು ತಿಳಿಸಿದನು. ಬಾರ್ಬರಿಕನು ಕೃಷ್ಣ ನೊಡನೆ ಬಯಲಿಗೆ ಬಂದು ‘ಏನನ್ನೂ ತೋರಿಸಲಿ?’ ಎಂದು ಕೇಳಿದನು. ಆಗ ಕೃಷ್ಣನು ತನ್ನ ಮುಂದೆ ಸ್ವಲ್ಪ ದೂರದಲ್ಲಿ ಇದ್ದ ಒಂದು ಅರಳಿ ಮರ ತೋರಿಸಿ ‘ಒಂದೆ ಬಾಣದಲ್ಲಿ ಅರಳಿ ಮರದಲ್ಲಿ ಇರೋ ಎಲ್ಲಾ ಎಲೆಗಳನ್ನೂ ತೂತು ಮಾಡು’ ಅಂತ ಹೇಳಿದನು. ಹಾಗೆ ಹೇಳಿದ ಕೃಷ್ಣನು ತನ್ನ ಮಾಯಾ ಶಕ್ತಿ ಯಿಂದ ಆ ಅರಳಿ ಮರದ ಒಂದು ಎಲೆಯನ್ನು ತನ್ನ ಕಾಲ ಪಾದದ ಕೆಳೆಗೆ ಅವಿತಿಟ್ಟು ಕೊಂಡನು. ಬಾರ್ಬರಿಕನು ತನ್ನ 3 ಬಾಣಗಳಲ್ಲಿ ಒಂದನ್ನು ತೆಗೆದು ಅದನ್ನು ಮಂತ್ರಿಸಿ, ಧನಸ್ಸಿಗೇರಿಸಿ ಎಳೆದು ಬಿಟ್ಟನು. ಆ ಬಾಣವು ಅರಳಿ ಮರದಲ್ಲಿ ಇದ್ದ ಎಲ್ಲ ಎಲೆಗಳನ್ನು ತೂತು ಮಾಡಿ ನಂತರ ಕೃಷ್ಣನು ಎಲೆ ಅವಿತುಕೊಂಡಿದ್ದ ಪಾದದ ಬಳಿ ಬಂದು, ಒಂದು ಸುತ್ತು ಹಾಕಿ ಪುನ ಬಾರ್ಬರಿಕ ಕೈ ಸೇರಿತು. ಕೃಷ್ಣ ತನ್ನ ಪಾದವನ್ನು ಸರಿಸಿ ನೋಡಿದಾಗ, ಅವನಿಗೆ ಆಶ್ಚರ್ಯವಾಗುವಂತೆ ತಾನು ಅವಿತಿಟ್ಟುಕೊಂಡಿದ್ದ ಆ ಎಲೆಯು ತೂತಗಿತ್ತು !
ಕೃಷ್ಣನಿಗೆ ತುಂಬಾ ಸಂತೋಷವಾಗಿ ‘ಬಾರ್ಬರಿಕ, ಇಡಿ ಲೋಕವು ನಿನ್ನಂಥ ವೀರ ಪರಾಕ್ರಮಿಯನ್ನು ಇದುವರೆಗೆ ನೋಡಿಲ್ಲ’ ಎಂದು ಹೋಗಳಿ, ಅವನು ಯುದ್ದದಲ್ಲಿ ಯಾರ ಕಡೆ ಸೇರಬಯಸುತ್ತಾನೆ? ಎಂದು ಕೇಳಿದಾಗ, ಬಾರ್ಬರಿಕನು ತನಗೆ ತನ್ನ ತಾತ ಭೀಮನ ಕಡೆ ಸೇರಿ ಯುದ್ದ ಮಾಡಲು ಇಚ್ಛೆ ಇದ್ದರು, ತಾನು ಯುದ್ದ ನೋಡಲು ತನ್ನ ತಾಯೀಯ ಬಳಿ ಅನುಮತಿ ಕೇಳಿ ಹೊರಡುವ ವೇಳೆಯಲ್ಲಿ ತಾನು ಯುದ್ದದಲ್ಲಿ ಭಾಗವಹಿಸುವುದಾದರೆ ಅದು ಯಾರೋ ಯುದ್ದದಲ್ಲಿ ಸೋಲುತ್ತಿರುತ್ತಾರೋ ಅಂಥವರ ಕಡೆ ಸೇರುತ್ತೇನೆ ಎಂದುಮಾತು ಕೊಟ್ಟಿರುವುದಾಗಿ ತಿಳಿಸಿದನು. ಕೃಷ್ಣನು ಈ ಮಾತು ಕೇಳಿ ಈ ಬಾರ್ಬರಿಕನ್ನು ತನ್ನ ನಿರ್ಧಾರದಂತೆ ನೆಡೆದು ಯುದ್ದದಲ್ಲಿ ಭಾಗವಹಿಸಿದರೆ ಪಾಂಡವರಿಗೆ ಹಾಗು ಧರ್ಮಕ್ಕೆ ಉಳಿಗಾಲವಿಲ್ಲ ಎಂದು ಯೋಚಿಸಿ, ಹಾಗೆ ಇದಲ್ಲದೆ ಇವನು ಯುದದಲ್ಲಿ ಭಾಗವಹಿಸಿದರೆ ಒಂದು ಸಲ ಪಾಂಡವರು ಸೂಲಬಹುದು, ಒಂದು ಸಲ ಕೌರವರು ಸೂಲಬಹುದು, ಹಾಗೆ ಈ ಬಾರ್ಬರಿಕನು ಎರಡು ಕಡೆ ಯುದ್ದ ಮಾಡುವಂತಾಗಿ ಎಲ್ಲರೂ ಸತ್ತು ಅವನೊಬ್ಬನೆ ಉಳಿಯೂ ಸಾಧ್ಯತೆ ಕೂಡ ಹೆಚ್ಚು ಎಂದು ಕೊಂಡು, ಇದಕ್ಕೆ ತಡೆ ಹಾಕಬೇಕು ಅಂತ ನಿರ್ಧರಿಸಿ ಕೃಷ್ಣನು ಬಾರ್ಬರಿಕನಿಗೆ ನಿನ್ನ ಗುರು ಯಾರು? ಎಂದು ಕೇಳಲು, ಬಾರ್ಬರಿಕನು ತಾನು ಈ ಎಲ್ಲ ವಿದ್ಯೆಯನ್ನು ಅಭ್ಯಾಸ ಮಾಡುವಾಗ ಕೃಷ್ಣನನ್ನೇ ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದರಿಂದ, ನೀನೆ ನನ್ನ ಗುರು ಎಂದು ತಿಳಿಸಿದನು. ಕೃಷ್ಣನು ಇದೇ ಮಾತನ್ನು ನಿರಿಕ್ಷಿಸುತಿದ್ದವನಂತೆ, ಹಾಗಾದರೆ ನನ್ನ ಗುರುದಕ್ಷಿಣೆ ನೀಡುವುದಿಲ್ಲವೆ? ಎಂದು ಕೇಳಿದನು. ಬಾರ್ಬರಿಕನು ಏನು ಬೇಕು? ಅಪ್ಪಣೆಯಾಗಲಿ… ಎಂದಾಗ ಕೃಷ್ಣನು ‘ಗುರುದಕ್ಷಿಣೆಯಾಗಿ ನಿನ್ನ ತಲೆಯನ್ನು ನನಗೆ ನೀಡು’ ಎಂದನು. ಬಾರ್ಬರಿಕನು ಎರಡನೇ ಯೋಚನೆ ಮಾಡದೇ ತನ್ನ ತಲೆಯನ್ನು ತನ್ನ ಬಾಣದಿಂದ ಕತ್ತರಿಸಿ ಕೃಷ್ಣನಿಗೆ ಅರ್ಪಿಸಿದನು. ಕೃಷ್ಣನು ಅವನ ತ್ಯಾಗವನ್ನು ಮೆಚ್ಚಿ ನಿನ್ನನ್ನು ಕಲಿಯುಗದಲ್ಲಿ ‘ಶ್ಯಾಮ’ ಎಂಬ ಹೆಸರಿನಲ್ಲಿ ಜನ ಪೂಜಿಸಲಿ ಎಂಬ ವರ ಕೊಟ್ಟನು. ಬಾರ್ಬರಿಕನು ಕೃಷ್ಣನಲ್ಲಿ ಈ ಮಹಾಭಾರಥದ ಯುದ್ದವನ್ನು ನೋಡಬೇಕೆಂದು ಬಹು ಆಸೆ ಇಟ್ಟು ಕೊಂಡಿದ್ದು, ಹಾಗಾಗಿ ಈ ಯುದ್ದ ಮುಗಿಯುವವರೆಗೂ ತನ್ನ ತಲೆಯನ್ನು ಜೀವಂತವಾಗಿ ಇಟ್ಟು ಯುದ್ದ ನೋಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡನು. ಕೃಷ್ಣನು ಅದರಂತೆ ಯುದ್ದ ನಡೆಯುವ ಸಮೀಪದ ಬೆಟ್ಟದಲ್ಲಿ (ಎತ್ತರವಾದ ಸ್ಥಳದಲ್ಲಿ) ಅವನ ತಲೆಯನ್ನು ಎರಡು ಬೂಂಬಿಗೆ ಸಿಕ್ಕಿಸಿ ಯುದ್ದ ನೋಡುವಂತೆ ಅನುಕೂಲ ಮಾಡಿಕೊಟ್ಟ ಎಂಬುದು ಕಥೆ.
ಮುಂದುವರೆದು ಮಹಾಭಾರತ ಯುದ್ದವು ಅರ್ಜುನ ಹೇಳಿದಂತೆ 18 ದಿನಕ್ಕೆ ಮುಗಿದ ಮೇಲೆ ಕೌರವರೆಲ್ಲ ಹತರಾದ ನಂತರ ಪಾಂಡವರಲ್ಲಿ ಯುದ್ದದಲ್ಲಿ ಯಾರು ಹೆಚ್ಚು ಪರಾಕ್ರಮದಿಂದ ಹೋರಾಡಿದರು ಎಂಬ ವಿಷಯವಾಗಿ ಚರ್ಚೆ ಶುರುವಾಯಿತು, ಅವರು ಅ ಬಗ್ಗೆ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದೆ ಇದ್ದಾಗ ಕೃಷ್ಣನು ‘ ನಮ್ಮೆಲ್ಲರಿಗಿಂತ ಬಾರ್ಬರಿಕನು ಪರಾಕ್ರಮಿ… ಈ ಯುದ್ದವನ್ನು ಸಂಪೂರ್ಣವಾಗಿ ಹಾಗು ಸರಿಯಾಗಿ ನೋಡಿರುವವನು ಎಂದರೆ ಅವನೊಬ್ಬನೆ… ಅವನನ್ನೇ ಕೇಳೋಣ’ ಎಂದು ಹೇಳಿ, ಎಲ್ಲರನ್ನು ಬಾರ್ಬರಿಕನ ತಲೆ ಇರುವಲ್ಲಿಗೆ ಕರೆದು ಕೊಂಡು ಬಂದು, ಯುದ್ದದಲ್ಲಿ ಪಾಂಡವರ ಕಡೆ ಯಾರು ಹೆಚ್ಚು ಪರಾಕ್ರಮವಾಗೀ ಹೋರಾಡಿದರು ? ಎಂದು ಕೇಳಲಾಗಿ, ಅದಕ್ಕೆ ಬಾರ್ಬರಿಕನು ನಗುತ್ತೆ ‘ನಿಮ್ಮೆಲ್ಲರಿಗಿಂಥ ಹೆಚ್ಚು ಬಲಶಾಲಿ, ಪರಾಕ್ರಮಿ ಹಾಗು ಈ ಯುದ್ದ ನಿಮ್ಮಂತೆ ಗೆಲ್ಲಲು ಸಹಾಯ ಮಾಡಿದ ವ್ಯಕ್ತಿ ಬೇರೆಯಾರು ಅಲ್ಲ… ಕೃಷ್ಣ ! ಎಂದು ತಿಳಿಸಿದನು. ಅವನೆ ಯುದ್ದಕ್ಕೆ ಕಾರಣ ಕರ್ತ, ಅವನಿಂದಲೇ ನಿಮಗೆ ಗೆಲವು. ರಣರಂಗದಲ್ಲಿ ಎಲೆಲ್ಲೂ ಕೃಷ್ಣನ ಸುದರ್ಶನ ಚಕ್ರವು ಕೌರವರ ಕಡೆಯವರನ್ನು ಕತ್ತರಿಸಿ ಹಾಕುತಿತ್ತು’ ಎಂದು ತಿಳಿಸಿ, ಯುದ್ದ ನೋಡಲು ಅನುವು ಮಾಡಿಕೊಟ್ಟ ಕೃಷ್ಣನಿಗೆ ವಂದನೆ ಸಲ್ಲಿಸಿ ಬಾರ್ಬರಿಕನು ಪ್ರಾಣ ಬಿಟ್ಟನು. ಅವನು ಪ್ರಾಣ ಬಿಟ್ಟ ದಿನ ಶುಕ್ಲ ಪಕ್ಷ, ಫಾಲ್ಗುಣ ಮಾಸದ 12ನೇ ದಿನ. ಅವನ ತಲೆಯನ್ನು ತೆಗೆದು ಕೊಂಡು ಹೋಗಿ ‘ಖತು’ ಎಂಬ ಸ್ಥಳದಲ್ಲಿ ಹೊಳಲಾಯಿತು. ‘ಖತು’ ಎಂದರೆ ಈಗಿನ ‘ರಾಜಸ್ಥಾನ’. ಕಲಿಯುಗದಲ್ಲಿ ಒಮ್ಮೆ ಒಂದು ಹಸು ಬಾರ್ಬರಿಕನ ತಲೆ ಹೂಳಿರುವ ಜಾಗದಲ್ಲಿ ನಿಂತು ತನ್ನ ಕೆಚ್ಚಲಿನಿಂದ ಹಾಲು ಸೋರಿಸಲು ಶುರುಮಾಡಿತಂತೆ. ಜನ ಆಶ್ಚರ್ಯ ಗೊಂಡು ಆ ಜಾಗ ಅಗೆದಾಗ ಅಲ್ಲಿ ಅವರಿಗೆ ಬಾರ್ಬರಿಕನ ತಲೆ ಸಿಕ್ಕಿತಂತೆ. ಅದನ್ನು ಅವರು ಒಬ್ಬ ಬ್ರಾಮ್ಮಣನಿಗೆ ನೀಡಿದರಂತೆ. ಬ್ರಾಮ್ಮಣನು ಅದನ್ನು ಸುಮಾರು ದಿನ ಪೂಜಿಸಿದನೆಂದು ಹೇಳಲಾಗುತ್ತೆ. ಹೀಗಿರುವಾಗ ಖತು ಸಂಸ್ಥಾನದ ರಾಜ ರೂಪ್ ಸಿಂಗ್ ಚೌಹಾನ್ ಗೆ ಅವನ ಮನೆ ದೇವರು ಕನಸಿನಲ್ಲಿ ಬಂದು ಈ ಬಾರ್ಬರಿಕನ ತಲೆಯನ್ನು ಒಂದು ದೇವಸ್ತಾನ ಕಟ್ಟಿ ಪ್ರತಿಷ್ಟಾಪಿಸಿ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲು ಹೇಳಿತಂತೆ. ಅದರಂತೆ ರಾಜ ರೊಪ್ ಸಿಂಗ್ ನು ಕ್ರಿ. ಪೂ. 1027 ರಲ್ಲಿ ದೇವಸ್ಥಾನ ಕಟ್ಟಿಸಿ ಬಾರ್ಬರಿಕನ ತಲೆ ಹಾಗು ಒಂದು ಮೂರ್ತಿಯನ್ನು ಪ್ರತಿಷ್ಟಾಪಿಸಿಸಿದನು. ಈ ದೇವಸ್ಥಾನವನ್ನು 1720 ರಲ್ಲಿ ದೀವಾನ್ ಅಭಯ್ ಸಿಂಗ್ ನು ಈಗಿನ ಸ್ಥಿತಿಗೆ ಪುನರ್ ನಿರ್ಮಾಣ ಮಾಡಿದನು. ಬಾರ್ಬರಿಕನು ರಾಜಸ್ಥಾನದಲ್ಲಿ ಈಗ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೇ. ಈ ಖತುಶ್ಯಾಮಿಜೀಗೆ ಅಪಾರ ಭಕ್ತ ಸಮುದಾಯವೇ ಉಂಟು. ಹೋಳಿಯ 3-4 ದಿನ ಮುಂಚೆ ರಾಜಸ್ಥಾನದಲ್ಲಿ ನಡೆಯುವ ಫಾಲ್ಗುಣ ಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಬಾರ್ಬರಿಕ ಅಂದರೆ ಖತುಶ್ಯಾಮಿಜೀಯ ದರ್ಶನ ಪಡೆಯುತ್ತಾರೆ.
ಹಾಗೆ ಬಾರ್ಬರಿಕನ ಬಾಣ ಕೃಷ್ಣನ ಪಾದದ ಮೇಲೆ ಸುತ್ತು ಹಾಕಿ ಅವನ ಪಾದವನ್ನು ಘಾಸಿಗೊಳಿಸಿತ್ತು. ಹಾಗಾಗಿ ಅದು ಕೃಷ್ಣನ ವೀಕ್ ಪಾಯಿಂಟ್ ಆಗಿತ್ತು. ಕೃಷ್ಣನ ಸಾವು ಕೂಡ ಪಾದಕ್ಕೆ ‘ ಜರ ’ ಎಂಬ ಬೇಟೆಗಾರ ಬಿಟ್ಟ ಬಾಣ ತಾಕಿ ಪ್ರಾಣ ಹೊಯೀತು ಎಂದು ಹೇಳಲಾಗುತ್ತೆ. ಬಾರ್ಬರಿಕನ ಕಥೆ ಗೊತ್ತಿರೋ ಜನರು ಅವನಿಗೆ ಅವಕಾಶ ಸಿಕ್ಕಿದ್ದರೆ ಮಹಾಭಾರತದ ಯುದ್ದದಲ್ಲಿ ಮಹಾಪರಾಕ್ರಮಿ (ಬೆಸ್ಟ್ ವಾರಿಯರ್) ಎನಿಸುತ್ತಿದ್ದ ಅನ್ನುತ್ತಾರೆ. ಅದೇನೇ ಹೇಳಿ ಮನುಷ್ಯನಿಗೆ ಬರೀ ಚಾಣಾಕ್ಷತನ, ಪರಾಕ್ರಮ, ವಿದ್ಯಾ, ಕೌಶಲ್ಯಗಳು ಇದ್ದರೆ ಸಾಲದು. ಅದನ್ನು ಯಾವಾಗ ಹೇಗೆ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಅನ್ನೋ ನಾಲೆಡ್ಜ್ ಇರಬೇಕು. ಬಾರ್ಬರಿಕನು, ತಾನು ಇಂಥವರ ಕಡೆಯೇ ಸೇರಿ ಯುದ್ದ ಮಾಡಬೇಕು... ಅಂತ ಸರಿಯಾದ ಫರಂ (Firm) ಡಿಸಿಷನ್ ತೆಗೆದುಕೊಂಡಿದ್ದರೆ ಮಹಭಾರತದ ಕಥಾ ರೂಪವೇ ಬದಲಾಗುತಿತ್ತೇನೋ. ಈಗಲೂ ಮನಸಿನಲ್ಲಿ ಅದೇ ಪ್ರಶ್ನೆ ಕಾಡುತ್ತಾ ಇದೇ ‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

2 comments:

  1. ಗುಡ್. ಬಾರ್ಬರಿಕ ನ ಹೆಸರು ಕೇಳಿದ್ದು ಇದೆ ಮೊದಲು.
    ಬಾರ್ಬರಿಕ ಹಾಗೂ ಬಬ್ರುವಾಹನ - ಇಬ್ಬರೂ ಅಪ್ರತಿಮ ವೀರರು ಎನ್ನುವುದರಲ್ಲಿ ಸಂದೇಹವೇ ಇಲ್ಲ.

    ReplyDelete
  2. Hmmm...Good story & narration brother..Nija nange gothirlilla ee kathe...:)

    ReplyDelete