Saturday, June 5, 2010

ರಾಗಿ ತೂರುವ ಹಾಡಿನಿಂದ ತಾನ್ಸೇನ್ ನ ‘ದೀಪಕ್ ರಾಗ’ದವರೆಗೆ…

ಅವತ್ತು ನನ್ನ ಅತ್ತಿಗೆ ಮನೆಯವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ನನ್ನ ಅಣ್ಣ ಶಶಿ ಕೂಡ ಏಪ್ರಿಲ್ ಮೊದಲನೆ ವಾರ ಬಾಂಬೆಯಿಂದ 4 ದಿನ ಮೈಸೂರಿನಲ್ಲಿ ಇದ್ದು ಹೋಗೋಣ ಅಂತ ಬಂದಿದ್ದ. ಅತ್ತಿಗೆ ತಂದೆ ‘ಪಾಪಣ್ಣ’ ಅಂಕಲ್ ನಮ್ಮ ಮೈಸೂರು ತಾಲ್ಲೋಕು ಪಂಚಾಯಿತಿ E O ಆಗಿದ್ದರೆ. ಅವರಿಗೆ ಬಿಡುವು ಸಿಗುವುದೇ ಅಪರೂಪ ಹಾಗೆ ಸಿಕ್ಕಿದಾಗ ನಮ್ಮ ಮನೆಗೆ ಬಂದು ಅಪ್ಪಾಜಿ ಮತ್ತೇ ಅಮ್ಮನನ್ನು ಮಾತನಾಡಿಸಿಕೊಂಡು ಹೋಗ್ತಾ ಇರ್ತಾರೆ. ಅವತ್ತು ಅಮ್ಮ ಹಾಗು ಅತ್ತಿಗೆ ಸೇರಿ ಮಟ್ಟನ್ ಫ್ರೈ & ಸಾಂಬಾರ್, ಚಿಕನ್ ಕಬಾಬ್, ಎಗ್ಗ್ ಫ್ರೈ, ಚಪಾತಿ, ಇನ್ನು ಏನೇನೋ ಮಾಡದಿದ್ದರೂ. ಎಲ್ಲರೂ ಊಟ ಮಾಡಿ ಆಯಿತು. ಯಾಕೋ ಈ 2010 ರ ಬೇಸಿಗೆಯ ದಗೆ ಸಿಕ್ಕಪಟ್ಟೆ ಇತ್ತು. ಮೈಸೂರಿನಲ್ಲಿ ಕೆಲವೊಂದು ದಿನ ತಾಪಮಾನ 38 ಡಿಗ್ರಿ ಗೆ ಏರಿತ್ತು!. ಮೈಸೂರ್ ನಲ್ಲೆ 38 ಡಿಗ್ರಿ ಅಂದ್ರೆ ಇನ್ನು ಬಳ್ಳಾರಿ, ಬೆಳಗಾಂನ ತಾಪಮಾನ ಉಹಿಸೂಕೆ ಆಗುತ್ತಾ??? ನಾವು 1st ಫ್ಲೂರ್ ನಲ್ಲಿ ಮನೆ ಕಟ್ಟುವಾಗ ಮಾಡಿದ್ದ ಒಂದು ಒಳ್ಳೆ ಕೆಲಸವೇನೆಂದರೆ ಮುಂದೆ Sit out / Balcony ಗೆ ಅಂತ 22 ಅಡಿ ಉದ್ದ ಹಾಗು 5 ಅಡಿ ಅಗಲ ಸ್ಪೇಸ್ ಅನ್ನು ಬಿಟ್ಟಿದ್ದು. ಸಂಜೆ ಹೊತ್ತು ಕೂತು ಮಾತನಾಡಲು, ಊಟ ಆದ ಮೇಲೆ ತಿರುಗಾಡಲು, ಎಲ್ಲದಕ್ಕೂ Perfect ಆಗಿತ್ತು. ಸರಿ ಅವತ್ತು ಊಟ ಆದ ಮೇಲೆ ಅತ್ತಿಗೆ ತಂದು ಚಾಪೆ ಹಾಸಿದರು. ಸಮಯ ರಾತ್ರಿ 9.40 ಆಗಿತ್ತು. ಪಾಪಣ್ಣ ಅಂಕಲ್ ಮತ್ತೆ ಚಂದ್ರ ಆಂಟಿ ಚಾಪೆ ಮೇಲೆ ಕೂತಿದ್ದರು. ನಾನು, ಶಶಿ, ಅತ್ತಿಗೆ, ಪುಟ್ಟು(ಅತ್ತಿಗೆ ತಂಗಿ) ನಾಲ್ಕು ಜನ ಶೂ ಬಾಕ್ಸ್ ಗೆ ಅಂತ ಮಾಡಿಸಿದ್ದ ಬಾಕ್ಸ್ ಮೇಲೆ ಕೂತಿದ್ದೆವು. ಅಮ್ಮ ಮತ್ತೇ ಅಪ್ಪಾಜಿ ಚೇರ್ ತಂದು ಅದರೆ ಮೇಲೆ ಕೂತಿದ್ದರು. ನನ್ನ ಶರ್ಟ್, ಬನಿಯನ್ ಎಲ್ಲಾ ಬೆವರಿಗೆ ಒದ್ದೆಯಾಗಿತ್ತು. ಏನ್ ಶೆಕೆ ತಡಿಯೋಕೆ ಆಗ್ತಾನೆ ಇರಲಿಲ್ಲ. ಪಾಪಣ್ಣ ಅಂಕಲ್ ಅಪ್ಪಾಜಿಗೆ ‘ಏನ್ ಸರ್ ಇದು? ಮೈಸೂರ್ ನಲ್ಲಿ ಈ ಮಟ್ಟ ಶೆಕೆ... ಏನ್ ಮನುಷ್ಯ ಬದುಕೋಕೆ ಆಗುತ್ತ ಸರ್?...’ ಅಂದರು. ಚಂದ್ರ ಆಂಟಿ ಇದ್ದು ‘ ಸುತ್ತಮುತ್ತ ಇರೋ ಮರಗಳ ಒಂದಾದ್ರೂ ಎಲೆ ಅಲ್ಲಾಡುತ್ತ ಇಲ್ಲವಲ್ರಿ ನೋಡಿ..’ ಅಂತ ಪಾಪಣ್ಣ ಅಂಕಲ್ ಗೆ ಹೇಳಿದರು. ನಮ್ಮ ಮನೆ ಮುಂದೆ ಒಂದು ಹೊಂಗೆ ಮರ ಹಾಗು ಒಂದು ಸಂಪಿಗೆ ಮರನ ಅಪ್ಪಾಜಿ ಸುಮಾರು 15 - 16 ವರ್ಷದ ಹಿಂದೆನೇ ತಂದು ನೆಟ್ಟಿದ್ದರು.

ಅಪ್ಪಾಜಿ ಚಂದ್ರ ಆಂಟಿ ಹಾಗು ಅಂಕಲ್ ಮಾತು ಕೇಳಿ ‘ ಸರ್ ಹಿಂದಿನ ಕಾಲದಲ್ಲಿ ರಾಗಿ ಹಾಗು ಬತ್ತನಾ ಗದ್ದೆ ಹಾಗು ರಸ್ತೆಗಳಲ್ಲಿ ತೋರುತಿದ್ದಾಗ ಒಂದು ಹಾಡು ಹೇಳ್ತಾ ಇದ್ದರು ನೆನಪಿದಿಯಾ ಸರ್?..’ ಅಂತ ಪಾಪಣ್ಣ ಅಂಕಲ್ ಗೆ ಕೇಳಿದರು. ಪಾಪಣ್ಣ ಅಂಕಲ್ ‘ಅದೇನೋ ಹೇಳ್ತಾರೆ ಸರ್… ಈಗ ನೆನಪಿಗೆ ಬರ್ತಾ ಇಲ್ಲ ’ಅಂದ್ರು. ಅದಕ್ಕೆ ಅಪ್ಪಾಜಿ ‘ ಸರ್ ಬತ್ತ ಹಾಗು ರಾಗಿನ ಗಾಳಿಗೆ ತುರುವಾಗ ಅವರು ತೂರೋ ದಿಕ್ಕಿನಲ್ಲೇ ಗಾಳಿ ಬರಲಿ ಅಂತ ಹೊಯಿಲ್ ಗೋ ವಾಸುದೇವ... ಹೊಯಿಲ್ ಗೋ... ಅಂತಾರೆ, ಕೆಲವು ಸಲ ಕಾಕತಾಳಿಯ ಅನ್ನುವಂತೆ ಅವರು ಆ ರೀತಿ ಹೇಳಿದ ತಕ್ಷಣ ಗಾಳಿನು ಬೀಸಿಬಿಡುತ್ತೆ… ಹಾಗೆ ಈಗ ನಾವು ಅ ಹಾಡು ಹೇಳಿ ಗಾಳಿ ಬರಿಸ್ಕೋಬೇಕು… ಥೂ… ಏನ್ ಶೆಕೆ ಅಪ್ಪ...’ ಅಂತ ನಿಟ್ಟುಸಿರು ಬಿಟ್ಟರು. ಯಾಕೋ ಶೆಕೆ ಹೆಚ್ಚಾದಂತೆ ಆಗೀ ನಾನು ನಾನ್ ರೂಮಿಗೆ ಹೋಗಿ ಫ್ಯಾನಿನ ಸ್ಪೀಡನ್ನು ೫ ಕ್ಕೆ ಏರಿಸಿ ಹಾಗೆ ಹಾಸಿಗೆ ಮೇಲೆ ಉರುಳಿಕೊಂಡೆನು. ಪಾಪಣ್ಣ ಅಂಕಲ್, ಚಂದ್ರ ಆಂಟಿ, ಪುಟ್ಟು ಎಲ್ಲರೂ ಲೇಟ್ ಅಯೀತು ಪುನಃ ಇನ್ನೊಮ್ಮೆ ಬರ್ತೀವಿ ಅಂತ ಹೇಳಿ ಹೊರಟರು.

ನನಗಂತು ಅಪ್ಪಾಜಿ ಹೇಳಿದ ‘ಹೊಯಿಲ್ ಗೋ ವಾಸುದೇವ…’ ಅನ್ನೋ ಒಂದು ಹಾಡಿನಿಂದ ಗಾಳಿಯನ್ನು (ಅದರೆ ದಿಕ್ಕು ಹಾಗು ವೇಗವನ್ನು) ಕಂಟ್ರೋಲ್ ಮಾಡೋದು ನಿಜನಾ?... ಈ ರೀತಿ ನೈಸರ್ಗಿಕ ಶಕ್ತಿಗಳನ್ನು ಮನುಷ್ಯ ಯಾವಾಗಲಾದರು ನಿಜವಾಗಿಯೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದನಾ?... ಇದು ಸಾಧ್ಯನಾ?... ಅಂತೆಲ್ಲ ಯೋಚಿಸಿದೆ. ಹಾಗೆ ಯಾವುದಾದ್ರು ವಿಷಯಗಳನ್ನು ಅದರಲ್ಲೂ ಮೂಢ ನಂಬಿಕೆ ಹಾಗು ವಿಜ್ಞಾನ ವಿಷಯಗಳಿಗೆ ತಾಳೆ ಹಾಕಿಕೊಂಡಿರು ಕುತೂಹಲಕಾರಿ ವಿಷಯಗಳನ್ನ ಕುರಿತು ಯೋಚಿಸುವಾಗ ನನ್ನ ಒಳಮನಸ್ಸು (ಸಬ್ ಕಾನ್ಷಿಯಸ್ ಮೈಂಡ್) ತಕ್ಷಣ Respond ಮಾಡುತ್ತೆ. ಈ ಬಾರಿ ಅದು ತಾನ್ ಸೇನ್ ನ ಹೆಸರನ್ನು ಸೂಚಿಸುವ ಮೂಲಕ Respond ಮಾಡಿತ್ತು. YES ಕರೆಕ್ಟ್!!!! ಮಹಾರಾಜ್ ಅಕ್ಬರ್ ಆಸ್ಥಾನದಲ್ಲಿದ್ದ ಪ್ರಖ್ಯಾತ ಗಾಯಕ ತಾನ್ಸೇನ್ ಹೀಗೆ ಪ್ರಕೃತಿಯ(ನೈಸರ್ಗಿಕ) ಶಕ್ತಿ ಗಳನ್ನೂ ತನ್ನ ಸಂಗೀತದ ಮೂಲಕ ನಿಯಂತ್ರಿಸುತಿದ್ದನಂತೆ!. ತಾನ್ಸೇನ್ ತನ್ನ ಸಂಗೀತದಿಂದ ಹಾಗು ರಾಗಗಳಿಂದ ಅದ್ಬುತಗಳನ್ನು ಸೃಷ್ಟಿಸುತಿದ್ದನಂತೆ. ತಾನ್ಸೇನ್ ಅವನು ಹಾಡುತಿದ್ದ ವಿಶಿಷ್ಟ ರಾಗದಿಂದ ಚಿತ್ರ ಬಿಡಿಸುತಿದ್ದ, ಮಳೆ ಬರಿಸುತಿದ್ದ ಅಷ್ಟೆ ಅಲ್ಲದೆ ‘ದೀಪಕ ರಾಗ’ ಹಾಡಿ ಖಾಲಿ ಶೂನ್ಯದಿಂದ ಬೆಂಕಿ ಹತ್ತಿಸಿ, ದೀಪಗಳು ಉರಿಯುವಂತೆ ಮಾಡುತಿದ್ದನಂತೆ. ನಾನು ಟೈಮ್ ನೋಡಿದೆ 10.25 Pm ಅಗಿತ್ತು. ಏನ್ ಇಷ್ಟು ಬೇಗ ಮಲಗೋದು? ಅಂತ ಯೋಚಿಸಿ ಎದ್ದು ಕಂಪ್ಯೂಟರ್ ಆನ್ ಮಾಡಿ ಇಂಟರ್ನೆಟಗೆ ಕನೆಕ್ಟ್ ಆದೆ. ಅಡ್ರೆಸ್ ಬಾರ್ ನಲ್ಲಿ ಗೂಗಲ್ ಅಂತ ಟೈಪ್ ಮಾಡಿ, ಗೂಗಲ್ ನ ಸೈಟ್ ನಲ್ಲಿ ತಾನ್ಸೇನ್ ಮತ್ತು ಅವನ ಸಂಗೀತದ ಬಗ್ಗೆ ಗೂಗಲ್ ಮಾಡಿದೆ. ಮುಂದಿನ 1 ಗಂಟೆ ಕ್ರಿ.ಷ. 1525 ಕ್ಕೆ ಹೋಗಿ ತಾನ್ಸೇನ್ ಬಗ್ಗೆ ಇಂಟರ್ನೆಟ್ನಲ್ಲಿ ಲಭ್ಯವಿದ್ದ ಎಲ್ಲಾ ಮಾಹಿತಿ ಜಾಲಾಡಿ ವಾಪಸು ಬಂದೆ.

ತಾನ್ಸೇನ್ ಸಾಕಷ್ಟು ಜನ ತಿಳಿದಿರುವ ಹಾಗೆ ಅವನ ಮೂಲ ಮತ ಇಸ್ಲಾಂ ಅಲ್ಲ. ತಾನ್ಸೇನ್ ಒಬ್ಬ ಬ್ರಾಹ್ಮಣ. ಅವನು ಹುಟ್ಟಿದ್ದು ಕ್ರಿ.ಷ.1492ರಲ್ಲಿ ಅಂತ ಕೆಲವೊಂದು ದಾಖಲೆಗಳು ತಿಳಿಸಿದರೆ ಮತ್ತೆ ಕೆಲವು ಕ್ರಿ.ಷ. 1506 ಅಂತ ತಿಳಿಸುತ್ತವೆ. ತಾನ್ಸೇನ್ ನ ಹುಟ್ಟಿದ ವರ್ಷದ ಬಗ್ಗೆ ಇನ್ನು ಗೊಂದಲವಿದೆ. ಗ್ವಾಲಿಯರ್ ಹತ್ತಿರವಿರುವ ‘ಬೆಹತ್’ ಎಂಬ ಗ್ರಾಮದಲ್ಲಿ ವಾಸವಿದ್ದ ಮಕರಂದ ಪಾಂಡೆ ದಂಪತಿಗಳಿಗೆ ಹಲವು ವರ್ಷ ಮಕ್ಕಳಿರಲಿಲ್ಲವಂತೆ. ಒಂದು ದಿನ ಆ ದಂಪತಿಗಳು ಆ ಊರಿನಲ್ಲಿ ಬೀಡು ಬಿಟ್ಟಿದ್ದ ಸಂತ ಪೀರ್ ಮೊಹಮ್ಮೆದ್ ಘಾಸ್ ಹತ್ತಿರ ಹೋಗಿ ಬೇಡಿಕೊಂಡಾಗ, ಅವನು ಅವರಿಬ್ಬರಿಗೆ ಆಶಿರ್ವದಿಸಿ ಮಕರಂದ ಪಾಂಡೆಯ ಬಲಗೈಗೆ ಒಂದು ದಾರ ಕಟ್ಟಿದನಂತೆ. ಆ ಘಟನೆ ನೆಡೆದ ಕೆಲವೇ ದಿನದಲ್ಲಿ ಮಕರಂದ ಪಾಂಡೆ ಮಡದಿಯು ಒಂದು ಗಂಡುಮಗುವಿಗೆ ಜನ್ಮ ಕೊಟ್ಟಳು. ಮಕರಂದ ಪಾಂಡೆಯು ಆ ಮಗುವಿಗೆ ‘ರಾಮ್ ತನು’ ಎಂದು ಹೆಸರಿಟ್ಟನು. ಈ ರಾಮ್ ತನುನೇ ಮುಂದೆ ಭಾರತದ ಅತ್ಯಂತ ಪ್ರಖ್ಯಾತ ಸಂಗೀತಗಾರ ‘ತಾನ್ಸೇನ್’ ಆಗಿ ಬೆಳೆದ. ತಾನ್ಸೇನ್ ನನ್ನು ಅವನ ತಂದೆ ತಾಯಿ ಪ್ರೀತಿಯಿಂದ ‘ತನ’ ಮತ್ತು ‘ಮುಕುಲ್’ ಅಂತ ಕರೆಯುತಿದ್ದರಂತೆ. ತಾನ್ಸೇನ್ ನಿಗೆ ಬಾಲ್ಯದಲ್ಲಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಅಭ್ಯಾಸವಾಗಿತ್ತು. ಅವನು ಪ್ರಕೃತಿಯಲ್ಲಿ ಕೇಳಿಬರುವ ಎಲ್ಲ ಶಬ್ದಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತಿದ್ದನಂತೆ. ಒಮ್ಮೆ ತಾನ್ಸೇನನು ಕಾಡಿನಲ್ಲಿ ಪಕ್ಷಿ ಗಳ ಕಲರವ ಕೇಳುತಿದ್ದಾಗ ಯಾವೂದೊ ಒಂದು ಪಕ್ಷಿಯು ವಿಚಿತ್ರವಾಗಿ ಒಂದು ಇಂಪಾದ ರಾಗ ಹೊರಡಿಸಿದಾಗ ಅಲ್ಲೇ ಇದ್ದ ಒಂದು ಚಿಕ್ಕ ಒಣಗಿದ ಗಿಡದ ಬಳ್ಳಿಯು ಬೆಂಕಿ ಹತ್ತಿಕೊಂಡಿತಂತೆ!. ಈ ಘಟನೆಯೇ ಅವನು ಮುಂದೆ ದೀಪಕ್ ರಾಗ ಕಂಡುಹಿಡಿಯಲು ಪ್ರೇರಣೆಯಾಯಿತು ಅಂತ ಒಂದು ಕತೆ ಹೇಳುತ್ತದೆ. ಒಮ್ಮೆ ಅವನು ಕಾಡಿನ ದಾರಿಯಲ್ಲಿ ಹುಲಿಯ ಧ್ವನಿಯನ್ನು ಅನುಕರಣೆ ಮಾಡುತಿದ್ದಾಗ ಅದನ್ನು ಕೇಳಿದ ಹರಿದಾಸ್ ಎಂಬ ಸಂಗೀತದ ಗುರು ಇವನ ಪ್ರತಿಭೆಯನ್ನು ಮೆಚ್ಚಿ, ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ,ತಮ್ಮ ಎಲ್ಲ ಸಂಗೀತದ ವಿದ್ಯೆಯನ್ನು ಅವನಿಗೆ ಧಾರೆ ಎರೆಯಲು ನಿರ್ಧರಿಸಿದರು. ಅವರಿಂದ ಸಾಕಷ್ಟು ವಿದ್ಯಾ ಕಲಿತ ಮೇಲೆ ತಾನ್ಸೇನ್ ಅವರ ತಂದೆಗೆ ಹುಷಾರಿಲ್ಲದ ಕಾರಣ ಅವರಲ್ಲಿಗೆ ಹಿಂದಿರುಗಿದ. ಪುನ ಕೆಲ ಕಾಲ ಬಿಟ್ಟು ಅವರ ತಂದೆಯ ಮಾತಿನಂತೆ ಮೊಹಮ್ಮೆದ್ ಘಾಸ್ ಎಂಬುವರ ಹತ್ತಿರ ಸಂಗೀತ ಅಭ್ಯಾಸ ಮಾಡಲು ಸೇರಿದನು. ಅಲ್ಲಿ ಸಂಗೀತ ಕ್ಷೇತ್ರದಲ್ಲಿ ಉನ್ನತವಾಗಿ ಪರಿಣಿತಿ ಪಡೆದು ಗ್ವಾಲಿಯರ್ ರಾಜನ ಆಸ್ತಾನದಲ್ಲಿ ಗಾಯಕನಾಗಿ ಸೇರಿದ. ಅಲ್ಲಿ ಆಸ್ತಾನದಲ್ಲಿ ಸೇವಕಿಯಗಿದ್ದ ‘ಹುಸನಿ’ ಎಂಬವಳನ್ನು ಮದುವೆಯಾದ ಅಂತ ಹಲವು ಪುಸ್ತಕಗಳು ತಿಳಿಸುತ್ತವೆ. ತಾನ್ಸೇನ್ ನ ಖ್ಯಾತಿ ದಿನದಿಂದ ಬೆಳದಂತೆ. ಅಕ್ಬರ್ ಮಹಾರಾಜನು ಆ ಗ್ವಾಲಿಯರ್ ರಾಜನಿಗೆ ತಾನ್ಸೇನ್ ನನ್ನು ತನ್ನ ಆಸ್ತಾನಕ್ಕೆ ಕಳುಹಿಸಲು ಆದೇಶಿಸಿದ.

ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ತುಂಬಾ ಬೇಗ ಪ್ರಸಿದ್ದಿಯಾದ. ಅಲ್ಲಿಯ ಜನರಿಗೆ ಅವನು ಸಂಗೀತದ ಮಾಂತ್ರಿಕ ಎಂದು ಅರಿವಾಯಿತು. ತಾನ್ಸೇನ್ ನು ಸಂಗೀತ ಲೋಕದಲ್ಲಿರುವ ಎಲ್ಲ ರಾಗಗಳ ಮೇಲೆ ನಿಯಂತ್ರಣ ಹೊಂದಿದ್ದಾನೆ ಮತ್ತು ಅವುಗಳನ್ನು ಹಾಡುವ ಮೂಲಕ ಅದ್ಬುತ ಹಾಗು ವಿಸ್ಮಯ ಗಳನ್ನೂ ಸೃಷ್ಟಿಸುತಾನೇ ಎಂದೆಲ್ಲ ಜನ ಹೇಳುತ್ತ ಇದ್ದರು. ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ದಿನಾಲೂ ಅಕ್ಬರ್ ಮಹಾರಾಜನಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಹಾಗು ಬೆಳಗಿನ ಜಾವದಲ್ಲಿ ಎದ್ದೇಳಲು ಸಹಾಯವಾಗುವಂತೆ ಇಂಪಾದ ರಾಗಗಳನ್ನು ಹಾಡುತ್ತಿದ್ದನು ಅಂತ ಹೇಳಲಾಗಿದೆ. ತಾನ್ಸೇನ್ ನು ಭಾರತದ ಶಾಸ್ತ್ರಿಯ ಸಂಗೀತದ ರಾಗವನ್ನು ಅರೇಬಿಕ್ ಹಾಗು ಪೆರ್ಸಿಯ ರಾಗಗಳೊಂದಿಗೆ ಸೇರಿಸಿ ಹೊಸದಾದ ರಾಗಗಳನ್ನೂ ಸೃಷ್ಟಿಸುತ್ತಿದ್ದ. ಒಮ್ಮೆ ಅಕ್ಬರನ ಸೈನಿಕರು ಕಾಡಿನಲ್ಲಿ ಒಂದು ಕಾಡಾನೆಯನ್ನು ಹಿಡಿದುಕೊಂಡು ಬಂದು, ಅದನ್ನು ಪಳಗಿಸುವಲ್ಲಿ ವಿಫಲರಾಗಿ ನಂತರ ಆ ಕಾಡಾನೆಯು ಅರಮನೆ ಆವರಣದಲ್ಲಿ ಸಿಕ್ಕ ಸಿಕಲ್ಲಿ ನುಗ್ಗಿ ಇನ್ನೇನು ಸಾಕಷ್ಟು ಹಾನಿ ಮಾಡಬೇಕು ಅನ್ನುವಷ್ಟರಲ್ಲಿ ತಾನ್ಸೇನ್ ನು ತನ್ನ ಒಂದು ವಿಶಿಷ್ಟ ರಾಗದಿಂದ ಆನೆಗೆ ಮೋಡಿ ಮಾಡಿ ಅದನ್ನು ಪಳಗಿಸಿ ನಿಯಂತ್ರಣಕ್ಕೆ ಬರುವಂತೆ ಮಾಡಿದನು. ಅಷ್ಟೇ ಅಲ್ಲದೆ ‘ಸಂಧ್ಯಾ ರಾಗ’ ಎಂಬ ರಾಗವನ್ನು ತಾನ್ಸೇನ್ ನು ಬೆಳಗಿನ ಅಥವಾ ಮಧ್ಯಾನದ ಹೊತ್ತು ಹಾಡುತ್ತಿದ್ದರೆ, ಸೂರ್ಯನ ಕಿರಣಗಳು ಮಂಕಾಗಿ, ಅವನು ಹಾಡುತಿದ್ದ ಸುತ್ತ ಮುತ್ತ ವಾತವರಣದಲ್ಲಿ ಸಂಜೆಯಾಗಿದೆ ಏನೋ ಎಂಬಂತೆ ಬಾಸವಾಗುತ್ತಿತಂತೆ!. ತಾನ್ಸೇನ್ ನು ಅಕ್ಬರನ ಆಸ್ತಾನದಲ್ಲಿ ಬರೀ ಗಾಯಕನಲ್ಲದೆ ಆ ಕಾಲದಲ್ಲಿ ಅವನ(ಅಕ್ಬರನ) ಆಸ್ತಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ ೯ ಜನರಲ್ಲಿ ಅಂದ್ರೆ ನವರತ್ನಗಳು ಎಂದು ಕರೆಯುತಿದ್ದವರಲ್ಲಿ ಪ್ರಮುಖನಾಗಿದ್ದ.[ ಅಕ್ಬರನ ಆಸ್ತಾನದಲ್ಲಿದ್ದ ನವರತ್ನಗಳು ಎಂದು ಹೆಸರಾಗಿದ್ದವರು ಯಾರು ಯಾರೆಂದರೆ... 1) ಅಬುಲ್ ಫಾಜ್ಲ್ – ‘ಅಕ್ಬರ್ ನಾಮ’ ಕೃತಿಯ ಲೇಖಕ. ಇವನು ಅಕ್ಬರ್ ನ ಆಸ್ತಾನದಲ್ಲಿ ಆಡಳಿತಕಾರಿಯಗಿದ್ದ. 2) ಫೈಜಿ - ಅಬುಲ್ ಫಾಜ್ಲ್ ನ ತಮ್ಮ. ಅಕ್ಬರ್ ಮಗನ ಗುರು ಹಾಗು ಒಳ್ಳೆ ಕವಿ. 3) ತಾನ್ಸೇನ್ 4) ಬೀರ್ ಬಲ್ – ಬೀರ್ ಬಲ್ ನ ಬಗ್ಗೆ ಕೇಳದವರಿಲ್ಲ ಬಿಡಿ. ಆದರು ಬೀರ್ ಬಲ್ ‘ಬ್ರಹ್ಮ’ ಎಂಬ ಕಾವ್ಯನಾಮದೊಂದಿಗೆ ಅನೇಕ ಕವಿತೆ ರಚಿಸಿರುವುದು ಅನೇಕ ಜನರಿಗೆ ಗೊತಿಲ್ಲದ ವಿಷಯವಾಗಿದೆ. ಅವುಗಳು ಈಗಲೂ ಭರತ್ ಪುರ್ ನ ವಸ್ತುಸಂಗ್ರಹಾಲಯದಲ್ಲಿದೆ. ಬೀರ್ ಬಲ್ ನ್ನು ಅಫ್ಘಾನಿ ಬುಡ ಕಟ್ಟು ಸೈನ್ಯದೊಂದಿಗಿನ ಯುದ್ದದಲ್ಲಿ ಮರಣಿಸಿದನು. 5) ರಾಜ ತೊದರ್ ಮಲ್ – ಅಕ್ಬರ್ ನ ವಿತ್ತ ಮಂತ್ರಿ 6) ರಾಜ ಮಾನ್ ಸಿಂಗ್ – ಅಂಬರ್ ಸಂಸ್ಥಾನದ ರಜಪುತ್ ರಾಜ 7) ಅಬ್ದುಲ್ ರಹಿಮ್ ಖಾನ್ – ಅಕ್ಬರ್ ಆಸ್ತಾನದ ಕವಿ 8) ಫಾಗಿರ್ ಅಜಿಯಾ ದಿನ್ 9) ಮುಲನ್ ದೋ ಪೈಝಾ, ಇವರಿಬ್ಬರು ಅಕ್ಬರ್ ನ ಆಪ್ತ ಸಲಹಗಾರರಾಗಿದ್ದರಂತೆ]

ಅಕ್ಬರನು ತಾನ್ಸೇನ್ ಗೆ ಪ್ರೀತಿಯಿಂದ ‘ ಮಿಯನ್ ’ ಎಂಬ ಬಿರುದು ಕೊಟ್ಟಿದ. ಎಲ್ಲರೂ ತಾನ್ಸೇನ್ ನನ್ನು ‘ ‘ಮಿಯನ್ ತಾನ್ಸೇನ್’ ’ಎಂದೆ ಕೂಗತೊಡಗಿದ್ದರು. ‘ಮಿಯನ್’ ಎಂದರೆ ಕಲಿತಿರುವ ಮನಷ್ಯ ಎಂದರ್ಥವಂತೆ. ಅಕ್ಬರ್ ನೊಂದಿಗೆ ತಾನ್ಸೇನ್ ನ ಈ ಆತ್ಮಿಯ ಒಡನಾಟ ಅನೇಕ ಜನರಿಗೆ ಹಿಡಿಸಲಿಲ್ಲ. ಅನೇಕರು ಅಸೂಯೆ ಪಟ್ಟರು. ಹೇಗಾದರೂ ಮಾಡಿ ಅವನನ್ನು ಒಂದು ಬಾರಿ ಯಾವುದಾದರು ಸವಾಲಿನಲ್ಲಿ ಸೋಲಿಸಿ ಅಥವಾ ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಕ್ಬರ್ ರಾಜನಿಂದ ದೂರ ಮಾಡಬೇಕು ಎಂದು ಅವನ ವೈರಿಗಳು ಹೊಂಚು ಹಾಕಿ, ಅಕ್ಬರ್ ರಾಜನ ಬಳಿಗೆ ಹೋಗಿ ತಾನ್ಸೇನ್ ನು ಈಗ ಹೊಸ ರಾಗ ಕಲಿತಿದ್ದು, ಆ ರಾಗ ಹಾಡಿದರೆ ದೀಪಗಳು ತಾವಾಗಿಯೇ ಹತ್ತಿಕೊಳ್ಳುತ್ತವೆಯಂತೆ ಎಂದು ಹೇಳಿದರು. ಅಕ್ಬರನಿಗೆ ಆಶ್ಚರ್ಯವಾಗಿ ತಾನ್ಸೇನ್ ನನ್ನು ಕರೆಸಿ ಈ ಬಗ್ಗೆ ವಿಚಾರಿಸಲಾಗಿ ತಾನ್ಸೇನ್ ನು ಹೌದು ಆ ರೀತಿಯ ಒಂದು ರಾಗವಿದ್ದು ಅದಕ್ಕೆ ‘ದೀಪಕ್ ರಾಗ’ ಎಂದು ಹೆಸರು, ಅದನ್ನು ಹಾಡಿದರೆ ಸುತ್ತ ಮುತ್ತಲಿನ ವಾತವರಣವು ಬಿಸಿಯಾಗಿ ದೀಪಗಳಿದ್ದರೆ ಹತ್ತಿಕೊಳ್ಳುತವೆ. ಆದರೆ ಆ ರಾಗ ಹಾಡಿದರೆ ನನ್ನ ದೇಹದಲ್ಲಿ ಉಷ್ಣ ಹೆಚ್ಚಾಗಿ ನನ್ನ ದೇಹವೇ ಉರಿದು ಹೋಗುವ ಸಾಧ್ಯತೆ ಹೆಚ್ಚು, ಹಾಗಾಗಿ ನಾನು ‘ದೀಪಕ್ ರಾಗ’ವನ್ನು ಹಾಡುವುದಿಲ್ಲ ಎಂದು ತಿಳಿಸಿದನು. ಆದರೆ ರಾಜ ಅಕ್ಬರನು ನೀನು ದೀಪಕ್ ರಾಗವನ್ನು ಹಾಡಲೇಬೇಕು ಅಂತ ಒತ್ತಾಯ ಮಾಡಿದಾಗ ತಾನ್ಸೇನ್ ನು 15 ದಿನಗಳ ಕಾಲಾವಕಾಶವನ್ನು ಕೇಳಿಕೊಂಡನು. ತಾನ್ಸೇನ್ ನು ದೀಪಕ್ ರಾಗ ಹಾಡಿ ಮುಗಿಸಿದ ಕೂಡಲೆ ಅವನ ದೇಹದ ತಾಪಮಾನ ಜಾಸ್ತಿ ಆಗಿ ತಾನು ಉರಿದು ಹೋಗುವ ಮುನ್ನ ಯಾರಾದರು ಮಳೆ ಬರಿಸುವಂತಹ ‘ ಮೇಘ ಮಲ್ಹರ್’ ಎಂಬ ರಾಗವನ್ನು ಹಾಡಬೇಕು. ಅದನ್ನು ಹಾಡಿದರೆ ವಾತಾವರಣ ತಂಪಾಗಿ ತಾನ್ಸೇನ್ ನ ಜೀವ ಉಳಿಯಬಹುದು. ಹಾಗಾಗಿ ತಾನ್ಸೇನ್ ನು ಆ ರಾಗವನ್ನು ತನ್ನ ಮಗಳಿಗೆ(ಕೆಲವರ ಪ್ರಕಾರ ಅವನ ಪತ್ನಿಗೆ) ಈ ‘ ಮೇಘ ಮಲ್ಹರ್’ ರಾಗ ಹೇಳಿಕೊಡುತ್ತಾನೆ. 15 ದಿನ ಕಳೆದು ರಾಜ ಅಕ್ಬರ್ ನ ಆಸ್ತಾನದಲ್ಲಿ ತಾನ್ಸೇನ್ ನು ‘ದೀಪಕ್ ರಾಗ’ ಹಾಡಲು ಎಲ್ಲ ಸಿದ್ಧತೆ ಮಾಡಿಕೊಂಡು ಹಾಡಲು ಶುರುಮಾಡಿದನು. ಅರಮನೆಯಲಿದ್ದ ಗಿಡ ಮರಗಳ ಎಲೆ ಎಲ್ಲ ಒಣಗಿ ಉದುರಿದವು, ಅರಮನೆ ಕೊಳದಲಿದ್ದ ನೀರು ಬೆಚ್ಚಗಾಗಿ ಕುದಿಯತೊಡಗಿತು, ಸುತ್ತ ಮುತ್ತಲಿದ್ದ ಹಕಿಗಳು ಹಾರಡ ತೊಡಗಿದವು ಇಡೀ ವಾತವರಣವು ಬಿಸಿಯಾಗಿ ಆಸ್ತಾನದ ಸುತ್ತ ಎಣ್ಣೆ ತುಂಬಿಸಿ ಇಟ್ಟಿದ್ದ ದೀಪಗಳೆಲ್ಲಾ ಒಮ್ಮೆಲೇ ‘ದಿಗ್’ ಎಂದು ಹತ್ತಿಕೊಂಡವಂತೆ!!!.

ತಾನ್ಸೇನ್ ನು ಕೂಡಲೇ ಹಾಡುವುದನ್ನು ನಿಲ್ಲಿಸಿ, ಆಸ್ತಾನದಿಂದ ಹಾಗು ಅರಮನೆಯ ಹೊರಗೆ ಓಡಿ ಊರ ಮಧ್ಯದಲ್ಲಿದ್ದ ಬಯಲಿನಲ್ಲಿ ನಿಂತನು. ಅಷ್ಟರಲ್ಲಾಗಲೇ ಅವನು ಹೇಳಿಕೊಟ್ಟ ‘ ಮೇಘ ಮಲ್ಹರ್’ ರಾಗವನ್ನು ಅವನ ಮಗಳು ಹಾಡಲಾರಂಭಿಸಿದ್ದಳಂತೆ. ಕೆಲ ಹೊತ್ತಿನಲ್ಲೇ ಜೋರಾಗಿ ಮಳೆಯಾಗಿ, ಇಡೀ ವಾತಾವರಣ ತಂಪಾಗಿ ತಾನ್ಸೇನ್ ನ ದೇಹದ ಉಷ್ಣವೂ ಕಡಿಮೆಯಾಗಿ ಅವನ ಜೀವ ಉಳಿದುಕೊಂಡಿತು.

ಈ ಕಥೆಯನ್ನು ಗುಜರಾತ್ ಕಡೆಯ ಜನಗಳು ಇನ್ನೊಂದು ರೀತಿ ಹೇಳುತ್ತಾರೆ. ತಾನ್ಸೇನ್ ನು ಆ ರೀತಿ ‘ದೀಪಕ್ ರಾಗ’ ಹಾಡಿ ದೀಪಗಳನ್ನು ಹತ್ತಿಸಿದ ಮೇಲೆ ದೇಹದ ಉಷ್ಣ ಜಾಸ್ತಿಯಾಗಿ ಅಕ್ಬರ್ ನ ಆಸ್ತಾನ ಬಿಟ್ಟು ಊರೂರು ಅಲೆಯುತ್ತ ‘ವದ್ ನಗರ’ಕ್ಕೆ ಬಂದನಂತೆ. ಅಲ್ಲಿ ‘ತನ’ ಮತ್ತು ‘ರಿರಿ’ ಎಂಬ ಇಬ್ಬರು ಚಿಕ್ಕ ಹುಡುಗಿಯರು ಇದ್ದರು.ಅವರು ಆ ಚಿಕ್ಕ ವಯಸ್ಸಿಗೆ ತುಂಬಾ ಚೆನ್ನಾಗಿ ಸಂಗೀತ ಕಲಿತಿದ್ದರಂತೆ. ಆ ಹುಡುಗಿಯರಿಗೆ ತಾನ್ಸೇನ್ ಎಂಬ ಮಹಾ ಸಂಗೀತಗಾರ ಈ ರೀತಿ ನರಳುತ್ತ ತಮ್ಮ ಊರಿಗೆ ಬಂದಿರುವ ವಿಷಯ ಗೊತ್ತಾಗಿ ಅವನ ಬಳಿ ಹೋಗಿ ‘ ಮೇಘ ಮಲ್ಹರ್’ ರಾಗ ಹಾಡಿ ಅವನ ವ್ಯಾಧೆಯನ್ನು ದೂರ ಮಾಡಿ ಅವನ ಜೀವ ಉಳಿಸಿದರಂತೆ. ಈ ವಿಷಯ ಅಕ್ಬರ್ ನ ಕಿವಿಗೆ ಬಿದ್ದು ಅವನು ಆ ಇಬ್ಬರು ಹುಡುಗಿಯರನ್ನು ತನ್ನ ಆಸ್ತಾನಕ್ಕೆ ಕರೆಸಲು ಅಪ್ಪಣೆ ಮಾಡಿ, ಆ ಹುಡುಗಿಯರು ಬರಲು ಒಪ್ಪದಿದ್ದಾಗ ಸೈನಿಕರನ್ನು ಕಳುಹಿಸಿ ಬಲವಂತವಾಗಿ ಕರೆತರಲು ನಿರ್ಧರಿಸಿದನು. ಈ ವಿಷಯ ‘ತನ’ ಮತ್ತು ‘ರಿರಿ’ ಗೆ ಗೊತ್ತಾಗಿ ‘‘ತಾವು ಹಾಡುವುದೇನಿದ್ದರು ಅದು ದೇವರಿಗೆ ಮಾತ್ರ, ಡೆಲ್ಲಿ ಸುಲ್ತಾನರಿಗೆ ಅಲ್ಲ!’’ ಅಂತೆ ಹೇಳಿ ಇಬ್ಬರು ಆ ಊರಿನ ಮಧ್ಯದಲ್ಲಿ ಇದ್ದ ಬಾವಿಗೆ ಹಾರಿ ಪ್ರಾಣ ತ್ಯಜಿಸಿದರಂತೆ. ಅ ಊರಿನವರು ಅ ಬಾವಿ ಸುತ್ತ ಸುಂದರ ಉದ್ಯಾನವನವನ್ನು ಕಟ್ಟಿದ್ದಾರೆ. ಅಹಮದಾಬಾದ್ ನಿಂದ 60 Kms ದೊರದಲ್ಲಿರು ಈ ‘ವದ್ ನಗರ’ದಲ್ಲಿರೋ ಆ ಬಾವಿ ಇವತ್ತಿಗೂ ಒಂದು ಪ್ರೇಕ್ಷಣಿಯ ಸ್ಥಳವಾಗಿದೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಯವರು ಆ ‘ವದ್ ನಗರ’ ಊರಿನವರೇ. ತಾನ್ಸೇನ್ ಬಗ್ಗೆ ಅನೇಕ ಚಲನ ಚಿತ್ರ ಗಳು ಬಂದಿವೆ. 1943 ರಲ್ಲಿ ಜಯಂತ ದೇಸಾಯಿ ನಿರ್ದೆಶಿಸಿದ್ದ ‘’ತಾನ್ಸೇನ್’’ ಚಿತ್ರಕ್ಕೆ ಕೇಂ ಚಂದ್ ಪ್ರಕಾಶ್ ಅದ್ಬುತ ಸಂಗೀತ ನೀಡಿದ್ದರಂತೆ. ಆ ಚಿತ್ರದ ಒಂದು ಹಾಡದ ‘ ಜಗ ಮಗ್ ಜಗ ಮಗ್ ದಿಯಾ ಜಲವೋ…’ ಎಂಬ ಹಾಡಿನಲ್ಲಿ ‘ದೀಪಕ್ ರಾಗ’ ಅಳವಡಿಸಲಾಗಿದೆಯಂತೆ. ತಕ್ಷಣ ಆ ಹಾಡನ್ನು ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ಕೇಳಿದೆ. 2-3 ಬಾರಿ ಕೇಳಿದಾಗ ಮೇಲೆ ಹಾಡೇನೋ ಇಷ್ಟವಾಯಿತು ಆದರೆ ಬೇಸಿಗೆ ಶೆಕೆಯ ಕಾರಣ ಬಂದ ಬೆವರು ಬಿಟ್ಟರೆ, ನನಗೆ ವಾತಾವರಣ ಬಿಸಿಯಾದ ಯಾವ ಅನುಭವ ಬರಲಿಲ್ಲ!. ತಾನ್ಸೇನ್ ನು ದುರ್ಬರಿ ಕನಡ, ಮಿಯನ್ ಕಿ ತೋಡಿ, ಮಿಯನ್ ಕಿ ಮಲ್ಹರ್, ಮಿಯ ಕಿ ಸಾರಂಗ್ ಅನ್ನೋ ರಾಗ ರಚಿಸಿದ್ದಾನೆ. ಪ್ರಖ್ಯಾತ ದ್ರುಪದ ಶೈಲಿಯಲ್ಲಿ ಹಾಡುವುದನ್ನು ಮೊದಲಿಗೆ ಶುರು ಮಾಡಿದ್ದೂ ತಾನ್ಸೇನ್ ನನೆ ಅನ್ನುತ್ತಾರೆ. ತಾನ್ಸೇನ್ ನು 1589 ರಲ್ಲಿ ಮರಣ ಹೊಂದಿದ ನಂತರ ಅವನನ್ನು ಗ್ವಾಲಿಯರ್ ನಲ್ಲಿರುವ ಅವನ 2ನೇ ಗುರು ಮೊಹಮ್ಮೆದ್ ಘಾಸ್ ನ ಸಮಾಧಿ ಹತ್ತಿರ ಮಣ್ಣು ಮಾಡಿದರಂತೆ. ತಾನ್ಸೇನ್ ನ ಮರಣದ ಸಮಯದಲ್ಲಿ ಅಕ್ಬರ್ ಅವನ ಪಕ್ಕದಲ್ಲಿದನಂತೆ.


ತಾನ್ಸೇನ್ ನ ಸಮಾದಿ ಪಕ್ಕ ಒಂದು ಹುಣಸೇ ಮರ ಇದೆ. ಆ ಮರದ ಎಲೆಯನ್ನು ಜಿಗಿದರೆ ಯಾರಾದರು ಸರಿ, ಅವರ ಧ್ವನಿ ಸುಧಾರಿಸುವುದು ಅಂತ ಇವತ್ತಿಗೂ ಜನ ನಂಬುತ್ತಾರೆ. ಪ್ರತಿವರ್ಷ ಡಿಸೆಂಬರ್ ನಲ್ಲಿ ಗ್ವಾಲಿಯರ್ ನಲ್ಲಿ ಒಂದು ವಾರ್ಷಿಕ ಸಂಗೀತೋತ್ಸವ ವನ್ನು ತಾನ್ಸೇನ್ ನ ನೆನಪಿಗೋಸ್ಕರ ನಡೆಸುತ್ತಾರೆ. ಏನೇ ಹೇಳಿ ನಮ್ಮ ಭಾರತದಲ್ಲಿ ಇಂತಹ ಒಬ್ಬ ಮಹಾನ್ ಸಂಗೀತಗಾರನಿದ್ದ ಅನ್ನೋದೆ ಒಂದು ಹೆಮ್ಮೆಯ ವಿಷಯ.
ಇಷ್ಟೆಲ್ಲಾ ಇಂಟರ್ನೆಟ್ನಲ್ಲಿ ಬ್ರೌಸ್ ಮಾಡಿ ಮುಗಿಸಿದಾಗ 11.45 Pm ಆಗಿತ್ತು. ಒಂದುವರೆ ಗಂಟೆ ಕಂಪ್ಯೂಟರ್ ಮಾನಿಟರ್ ನೋಡಿ.. ನೋಡಿ.. ಕಣ್ಣು Strain ಆಗಿತ್ತು. Comp ಆಫ್ ಮಾಡಿ, ಲೈಟ್ ಎಲ್ಲಾ ಆಫ್ ಮಾಡಿ ಮಲಗಿದ 7-8 ನಿಮಿಷದಲ್ಲಿ ಕರೆಂಟ್ ಹೊಯೀತು. ಫ್ಯಾನ್ ಆಫ್ ಆಗೀ ಶೆಕೆ ಶುರು ಅಯೀತು... ಸರಕಾರ ಹಾಗು ಕೆ.ಯಿ.ಬಿ.ಯವರನ್ನು ಶಪಿಸಿ, ತಾನ್ಸೇನ್ ಇದ್ದಿದ್ದರೆ ಅವನನ್ನು ಒಂದು ಕಡೆ ಕೂರಿಸಿ ಪವರ್ ಸ್ಟೇಷನ್ ನಲ್ಲಿದ್ದ Turbine ಗಳು ತಿರುಗುವಂತೆ ಹೊಸ ರಾಗ ಸೃಷ್ಟಿಸಿ, ಎಲ್ಲ ಪವರ್ ಸ್ಟೇಷನ್ ಗಳಲ್ಲೂ Loud Speaker ಹಾಕಿಸಿ ಆತನಿಂದ ಆ ರಾಗ ಹಾಡಿಸಬಹುದಿತ್ತಲ್ಲಾ ಎಂದೆನಿಸಿ ನಗು ಬಂದು ಹಾಗೆ ನಿದ್ರೆಗೆ ಜಾರಿದೆ.


1 comment: